ಒಂದಿಷ್ಟು ವರ್ಷಕ್ಕೊಮ್ಮೆ ಮರುಜನ್ಮ ಬರುತ್ತಂತೆ. ಹಾಗೆ ಒಂದಷ್ಟು ವರ್ಷದ ನಂತರ ಮತ್ತೆ ಬರೆಯುವ ಹುಚ್ಚು ಬಂದಿದೆ. ಭೂಮಿ ಗುಂಡಗಿದೆಯಂತೆ. ಹೇಗೆ ಹೋದರೂ ಮತ್ತೆ ತಿರುಗಿ ಅಲ್ಲಿಗೆ ಬರ್ತೀವಂತೆ. ಈ ವಿಚಾರ ಮತ್ತೆ ಮತ್ತೆ ನಿಜವಾಗ್ತಿದೆ. ಹಾಡು ಹೇಳಿ ಕೊಡುವ ಶಿಬಿರ, ಆಪ್ತ ಸಲಹೆ ಸಮಾಧಾನ, ಆಕ್ಯುಪ್ರೆಷರ್ ಕಲಿಕೆ ಹಾಗೂ ಚಿಕಿತ್ಸೆ ಎಲ್ಲವನ್ನೂ -ಸಂಕಲ್ಪ ಫಾರ್ ಚೇಂಜ್ ಅನ್ನುವ, ನನ್ನ ಸ್ನೇಹಿತೆ ಪ್ರಾರಂಭಿಸಿರುವ NGO ನಲ್ಲಿ ಮಾಡ್ತಾ ಇದ್ದೀನಿ. ಬದುಕಿನ ವಿವಿಧ ಘಟ್ಟದಲ್ಲಿ ಹುಟ್ಟಿಕೊಂಡಿದ್ದ ಆಸೆಗಳು ಈಗ ಸಾಕಾರವಾಗುತ್ತಾ ಇವೆ. ಧಾವಂತವಿಲ್ಲದೆ ದಶಕದ ನಂತರ ಬರೆದ ಕವನ-
ಧಾವಂತವೇನಿಲ್ಲ ಗುರಿ ಸೇರಲು
ಮುಗಿಯದಾ ಪಯಣವಿದು ನಿಡುಸುಯ್ಯಲು ||
ಗುರಿಯ ಮೊಳಕೆಯದು
ಮೊಳೆತ ಬಗೆ ಹೇಗೆ?
ಇಂದಿನ ಘಟ್ಟವನು
ತಲುಪಿದ್ದು ಹೇಗೆ?
ನನ್ನೆಲ್ಲಾ ಕನಸಿನಲಿ
ಒಳಗೊಂಡು ದೇವ
ಮುಂದಿನ ದಾರಿಯನು
ತೋರುವನು ಎನಗೆ ||೧||
ಹುಲ್ಲು ಮೊಳೆಯದ
ಒಣಕು ನೆಲದಲ್ಲಿ
ಹಚ್ಚನೆಯ ಹಸಿರು
ತೋಟವದು ಹೇಗೆ ?
ಕನಸು ಕಾಣುವುದು
ಮರೆತ ಮನದಲ್ಲಿ
ಉಕ್ಕುಕ್ಕಿ ಬರುತಲಿದೆ
ಸಿಹಿಗನಸು ಹೀಗೆ..||೨||
ಒಂದು ಎರಡಲ್ಲ
ನೂರಾರು ಜನುಮದಲಿ
ಮತ್ತೆ ಮತ್ತೆ ನೆಡೆದ
ಕಾಲ್ದಾರಿ ಇಹುದು
ಪ್ರತಿಯೊಂದು ಜನುಮದಲಿ
ಕೆಲ ಹೆಜ್ಜೆ ನೆಡೆಯುತ
ಗಮ್ಯವಿದು ಸನಿಹಕ್ಕೆ
ಬಂದಿಹುದು ನೋಡ..||೩||
No comments:
Post a Comment